ಗುರುವಾರ, ಜುಲೈ 25, 2013

5 ಪೈಸೆಯ ಪೆಪ್ಪರ್ಮೆ೦ಟಿನ ಖುಶಿ ೩೦ ರೂಪಾಯಿಯ ಕಿ೦ಡರ್ ಜಾಯ್ ನಲ್ಲೂ ಇಲ್ಲಾ...!!!!!!!!

ಒಂದು ದಿನ ನನ್ನ ಮಗ ಸ್ಕೂಲಿನಿಂದ ಬಂದವನೇ" ಅಮ್ಮ ನೀನು ನನಗೇಏನಾದರೂ ಗಿಫ್ಟ್ ಕೊಡಿಸಬೆಕು."ಎಂದ. "ಯಾಕೋ ,ಏನೋ ವಿಶೇಷ "ಎಂದೆ. "ಅಮ್ಮಾ ನಾನು ಸ್ಟೋರಿ ಟೆಲ್ಲಿಂಗ್ ಕಾಂಪಿಟೇಷನ್ನಲ್ಲಿ ಫಸ್ಟ್. "ಎಂದ . "ಸರಿ,ನಾಳೆ ಸಂಜೆ ನೀನು ಸ್ಕೂಲಿನಿಂದ ಬರೋಅಷ್ಟರಲ್ಲಿ ಏನಾದರೂ ಗಿಫ್ಟ್ ತಂದಿರುತ್ತೇನೆ . "ಎಂದೆ. ಮಾರನೇ ದಿನ ಸ್ಕೂಲಿಗೆ ಹೋಗುವಾಗ ,ಗಿಫ್ಟ್ ತರೋದನ್ನ ಮರಿಬೇಡ ಎಂದು ನನ್ನನ್ನು ಎಚ್ಚರಿಸಿ ಸ್ಕೂಲಿಗೆ ಹೋದ . ಸರಿ,ಅವನನ್ನು ಸ್ಕೂಲಿಗೆ ಕಳುಹಿಸಿ ,ನಾನು ನನ್ನ ಮನೆಗೆಲಸದಲ್ಲಿ ಬ್ಯುಸಿ ಆದೆ .  ಸಾಯಂಕಾಲ ೪. ೩೦ ರ ಹೊತ್ತಿಗೆ ,ನನ್ನ ಮಗನ ಎಚ್ಚರಿಕೆಯ ಮಾತು ನೆನಪಾಯಿತು. ಅಯ್ಯೋ ನನ್ನ ಕೆಲಸದ ಗಡಿಬಿಡಿಯಲ್ಲಿ ಮಗನಿಗೆ ಗಿಫ್ಟ್ ತರೋದನ್ನೇ ಮರೆತಿದ್ದೆ. ಅವನು ಸ್ಕೂಲಿನಿಂದ ಬರೋದು ೫ಕ್ಕೆ. ಅರ್ಧ ಗಂಟೆಯಲ್ಲಿ ಏನು ಗಿಫ್ಟ್ ತರೋದು ಅಂತ ಯೋಚಿಸುತ್ತಾ ,ತರಾತುರಿಯಲ್ಲಿ ಅಂಗಡಿಕಡೆ ಹೆಜ್ಜೆ ಹಾಕಿದೆ. ಆ ಅಂಗಡಿಯಲ್ಲಿ ಚಾಕೊಲೇಟ್,ಬಿಸ್ಕೇಟ್,ಇತ್ತು. ಸರಿ,ಬೇರೆಕಡೆ ಹೋಗಿ  ನೋಡೋಣ ಅಂದ್ರೆ ಟೈಮ್ ಇರಲಿಲ್ಲ. ಸರಿ ಕಿಂಡರ್ ಜಾಯ್ ತೊಗೊಂಡ್ರೆ ಖುಷಿ ಆಗಬಹುದೇನೋ ಅಂತ ೩೦ ರೂ. ಕೊಟ್ಟು ೨ ಸಾಸಿವೆ ಕಾಳಿನ ಗಾತ್ರದ ಚಾಕೊಲೇಟ್ ತೊಗೊಂಡ್, ಅಂತು ನನ್ನ ಮಗ ಮನೆ ತಲಪೋವೇಳೆಗೆ ಗಿಫ್ಟ್ ಕೈಯಲ್ಲಿ ಹಿಡಿದು ರೆಡಿಆದೆ. ನನ್ನ ಮನಸ್ಸಿನಲ್ಲಿ ,ನನ್ನ ಮಗ ನಾನು ತಂದ ಗಿಫ್ಟ್ ನೋಡಿ ಭಾರಿ ಖುಷಿ ಪಡುತ್ತಾನೆ ಅಂತ ಯೊಚಿಸುತ್ತಿದ್ದೆ. ಯಾಕಂದ್ರೆ ,ನಾವು ಚಿಕ್ಕವರಿರುವಾಗ ,೫ ಪೈಸೆ ಪೆಪ್ಪರ್ಮೆಂಟ್ ಅನ್ನು ಯಾರಾದರೂ ತಂದುಕೊಟ್ರು ಅದನ್ನು ,ಎಲ್ಲಾರಿಗೂ ಹೇಳಿ ,"ನೋಡೇ ಅಜ್ಜನ ಮನೆ ಮಾವ ಪೆಪ್ಪೆರ್ ಮೆಂಟ್ ತೈನ್ದ. ''ಅಂತ ಎಷ್ಟು ಖುಷಿ ಪಟ್ಕೊಂಡು  ತಿಂತಿದ್ವಿ ಸರಿ ನನ್ನ ಮಗನಿಗೆ ತಗೊಪ್ಪ ನಿನ್ನ ಗಿಫ್ಟ್ ಎಂದು ಕೊಟ್ಟೆ . ಅವನ ಮೊಗದಲ್ಲಿ,ನಗು ಖುಷಿ,ಸಂತೋಷ ,ಆನಂದ,ಯಾವುದೂ ಕಾಣಲಿಲ್ಲ....!!!!!!!ಬದಲಿಗೆ  " ಅಮ್ಮಾ ಕಿಂಡರ್ಜಾಯ್ ಯಾ? ಥ್ಯಾಂಕ್ಸ್ ." ಎಂದು ನೀರಸಭಾವನೆ ಇಂದ ಒಳಗೆ ನಡೆದ . ಹೌದು ,ಈಗಿನ ಮಕ್ಕಳಿಗೆ ಚಿಕ್ಕ ಚಿಕ್ಕ ವಿಷಯಗಳಲ್ಲೂ ಖುಷಿಪಡುವ ಮನೋಭಾವ ಕಡಿಮೆ . ಅವರ ಈ ಸಮಸ್ಯೆಗೆ ಕಾರಣ ಏನೆಂದರೆ ,ಅವರಿಗೆ ಬೇಕಾದ್ದು, ಅವರು ಕೇಳುವ ಮೊದಲೇ ಅವರ ಕೈಸೇರಿರುತ್ತದೆ,ಇಲ್ಲವೇ ಅವರು ಕೇಳಿದ ತಕ್ಷಣ ನಾವು ಕೊಡಿಸುತ್ತೇವೆ .  ಆದ್ದರಿಂದ ,ಮಕ್ಕಳಿಗೆ ಯಾವುದೂ ವಿಶೇಷ ಎನ್ನಿಸುವುದಿಲ್ಲಾ. ನಾವು ಚಿಕ್ಕವರಿರುವಾಗ ಹಬ್ಬ ಬಂತೆಂದರೆ ಭಾರಿ ಖುಷಿ . ಏಕೆಂದರೆ ಹಬ್ಬಕ್ಕೆ ಮಾತ್ರ ಮನೆಮಂದಿಗೆಲ್ಲಾ ಹೊಸಬಟ್ಟೆ ತರುತ್ತಿದ್ದರು ,ಆದರೆ ಈಗ ತಿಂಗಳಿಗೆ ಒಂದು ಜೊತೆ ಹೊಸ ಬಟ್ಟೆ,ಪ್ರತೀದಿನ ಚಾಕೊಲೇಟ್,ವಾರಕ್ಕೊಂದು ಟಾಯ್ಸ್. ಹೀಗಿರುವಾಗ ಮಕ್ಕಳಿಗೆ ಯಾವುದೂ ವಿಶೇಷ ಎನ್ನಿಸುವುದಿಲ್ಲಾ . ಯಾವುದಾದರೂ ವಸ್ತು ಅಪರೂಪಕ್ಕೆ ದೊರೆತಾಗ ಮಾತ್ರ ಅದರಿಂದ ಖುಷಿ ಪಡಲು ಸಾಧ್ಯ .. ..... ಅಲ್ವಾ ನೀವೇನ್ ಅಂತಿರಾ .... 

ಬುಧವಾರ, ಆಗಸ್ಟ್ 29, 2012

ಬಾಲ್ಯದಲ್ಲಿ ನಾವು ತಿ೦ದ ಕೆಲವು ಹಣ್ಣುಗಳ ಸಿಹಿ ನೆನಪು.....

ನಾವು ಹುಟ್ಟಿ ಬೆಳೆದದ್ದೇ ಹಳ್ಳಿಯಲ್ಲಿ....ಹಾಗೆಯೇ ನಮ್ಮ ವಿದ್ಯಾಭ್ಯಾಸವೂ ಕೂಡ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ.ಈಗಿನ ನಮ್ಮ ಮಕ್ಕಳಂತೆ ಅವಾಗ ನಮಗೆ ಕಾರ್,ಬೈಕ್,ಬಸ್ಸುಗಳಲ್ಲಿ ಶಾಲೆಗೆ ಹೋಗುವ ಪದ್ಧತಿ ಗೊತ್ತಿರಲಿಲ್ಲ..ಹಾಗೆಯೇ ನಾವು 5ರಿಂದ 6 ಕಿ.ಮಿ.ಒಳದಾರಿಯಲ್ಲಿ ನಡೆದುಕೊಂಡೇ ಹೋಗುತ್ತಿದ್ದೆವು.ಆವಾಗಿನ ಮಜವೇ ಬೇರೆ ಬಿಡಿ .ನಾವು ನಡೆದುಕೊಂಡು ಹೋಗುವಾಗ ದಾರಿಯ ಮಧ್ಯೆ ಸಿಗುವ ನೇರಳೆ ಹಣ್ಣು,ಕೌಳಿ ಕಾಯಿ,ಗುಡ್ಡೆ ಗೇರ್ ಹಣ್ಣು,ಸಂಪಿಗೆ ಹಣ್ಣು,ನೆಲ್ಲಿಕಾಯಿ,ಮುಳ್ ಹಣ್ಣು,ಸಳ್ಳೆ ಹಣ್ಣು,ಪುನ್ನೇರಳೆ ಹಣ್ಣು,ಹಾಂ...ಮರೆತಿದ್ದೆ ,ಪೇರಳೆ ಹಣ್ಣು ....ಅಬ್ಬಬ್ಬಾ ಎಷ್ಟೆಲ್ಲಾ ವೆರೈಟಿ ಹಣ್ಣುಗಳನ್ನು ಫ್ರೆಶ್ ಆಗಿ , ಫ್ರೀಯಾಗಿ,ಎಷ್ಟುಬೇಕೋ ಅಷ್ಟು ,ತೃಪ್ತಿ ಆಗುವವರೆಗೂ ತಿನ್ನುತಾ ಶಾಲೆಗೇ ಹೋಗುತ್ತಿದ್ದೆವು.ಆದರೆ ಈಗ ನಮ್ಮ ಮಕ್ಕಳಿಗೆ ಕೆಜಿ ಗೆ 100ರೋ 150ಕೊಟ್ಟುಸೇಬು,ಮೂಸುಂಬೆ,ಸಪೋಟ,ದಾಳಿಂಬೆ ಹೀಗೆ ದುಡ್ಡು ಕೊಟ್ಟು ,ಹಣ್ಣಿನ ಜೊತೆ ಕಾಯಿಲೆಯನ್ನೂ ತಂದು ಕೊಡುತ್ತೇವೆ!!!!!!ಏಕೆಂದರೆ ಎಲ್ಲಾ ಹಣ್ಣುಗಳನ್ನೂ ಸಾಮಾನ್ಯವಾಗಿ ಇಂಜೆಕ್ಟ್ ಮಾಡಿ ಹಣ್ಣು ಮಾಡಲಾಗಿರುತ್ತದೆಯಲ್ಲಾ......ನಮಗೆ ಆದಿನಗಳಲ್ಲಿ ಕಾಡು ಹಣ್ಣು ತಿಂದರೂ ಏನೂ ಆಗುತ್ತಿರಲಿಲ್ಲಾ.....ಆದರೆ ನಮ್ಮ ಮಕ್ಕಳಿಗೆ ಸೇಬು ತಿಂದರೆ ಕಫಾ..ಆಗುತ್ತೆ,ಕಿತ್ತಳೆ ತಿಂದರೆ ಶೀತ ಆಗುತ್ತೆ,ಪೇರಳೆ ತಿನ್ನಲು ಕೊಟ್ಟರೆ ಹಲ್ಲು ನೋವು ಬರುತ್ತೆ...ಈಗಿನ ಮಕ್ಕಳು ಎಷ್ಟರ ಮಟ್ಟಿಗೆ ಗಟ್ಟಿ  ಇರುತ್ತಾರೆ ನೀವೇ ಒಮ್ಮೆ ಯೋಚಿಸಿ....ಅಪ್ಪ ಯಾವಾಗಲೂ ಹೇಳುತ್ತಿದ್ದರು,ನಿಂಗಳ ವಯಸ್ಸಿನಲ್ಲಿದ್ದಾಗ ನಂಗ ಕಲ್ಲನ್ನೂ ತಿಂದು ಜೀರ್ಣಿಸಿ ಕೊಳ್ತಿದ್ಯಾ..ಅಂದರೆ ಆವಾಗಿನವರು ಅಷ್ಟು ಗಟ್ಟಿ.. ಒಂದೊಂದು ಹಲಸಿನ ಇಡೀ ಹಣ್ಣನ್ನು ಒಬ್ಬರೇ ತಿನ್ನುತಿದ್ದರು!!!!ಆದರೆ ಈಗಿನ ಮಕ್ಕಳು 2ಸೊಳೆ ಹಲಸಿನ ಹಣ್ಣು  ತಿಂದರೆ ಡೀಸೆಂಟರಿ ಸ್ಟಾರ್ಟ್ ಆಗತ್ತೆ :) :) :)

ಗುರುವಾರ, ಆಗಸ್ಟ್ 16, 2012

ನಾನು ಗಾಡಿ ಓಡಿಸೋದನ್ನ ಕಲಿತ ಪರಿ ಹೀಗಿದೆ.......

ನನಗಾಗ 15 ವರ್ಷ ಇರಬಹುದು.......ಅಪ್ಪ ಒಂದು ಟಿ .ವಿ.ಎಸ್ ಅನ್ನು ಹೊಸದಾಗಿ ಕೊಂಡುಕೊಂಡಿದ್ದರು.ನಮಗೆಲ್ಲಾ ಭಾರಿ ಸಂತೋಷ...ಏಕೆಂದರೆ ,ಅದು ಚಿಕ್ಕ ಗಾಡಿ,ಯಾರು ಬೇಕಾದರೂ ಓಡಿಸಬಹುದು ಅಂತ.ಸರಿ,ಒಂದು ವಾರದಲ್ಲಿ ನನ್ನ ತಮ್ಮ ಓಡಿಸೋದನ್ನು ಕಲಿತೆ ಬಿಟ್ಟ!!!!! ನನಗಾಗ ಭಾರಿ ಅವಮಾನ....ನನ್ನ ತಮ್ಮನೇ ಒಂದುವಾರದಲ್ಲಿ ಓಡಿಸೋದನ್ನ ಕಲಿತ,ನಾನು 2-3ದಿನದಲ್ಲಿಯಾದರೂ ಕಲಿಯಲೇ ಬೇಕು ಎಂದು ನನ್ನ ವಾಹನಾಭ್ಯಾಸವನ್ನು ಶುರು ಮಾಡಿದೆ.ಮೊದಲನೇ ದಿನ ಟಿ .ವಿ.ಎಸ್ ನ್ನು ಮನೆಯಿಂದ ರಸ್ತೆ ವರೆಗೆ ತಳ್ಳಿಕೊಂಡು ಬಂದೆ,ನಂತರ ನಿಧಾನವಾಗಿ ಅದರಮೇಲೆ ಕುಳಿತೆ.ನನ್ನ ತಮ್ಮ ಸ್ಟಾರ್ಟ್ ಮಾಡು ಅಂದ.ನನಗೋ ಮನಸ್ಸಿನಲ್ಲಿ ಭಯ ,ಕೈಕಾಲು ಗಡ  ಗಡ ,ಹೇಳಿಕೊಂಡರೆ ಮರ್ಯಾದೆ ಪ್ರಶ್ನೆ,ಏ ಇದೆಲ್ಲಾ ನನಗೆ ಗೊತ್ತು ಬಿಡೋ,ನೀನೇನೂ ಕಲಿಸೋದು ಬೇಕಾಗಿಲ್ಲ ಎಂದು ಬೀಗುತ್ತಾ ನಿಧಾನವಾಗಿ ಸ್ಟಾರ್ಟ್ ಮಾಡಿದೆ.ಮತ್ತೆ ಆಫ್ ಮಾಡಿದೆ.ನನ್ನ ತಮ್ಮ ,ನಿಧಾನ ಓಡಿಸು ಏನಾಗಲ್ಲ ಅಂದ,ನನಗೆ ಅಷ್ಟರಲ್ಲೇ ನನ್ನ ಕೈ ಕಾಲು ನಡುಕ ಜೋರಾಗಿ ,ನಿಧಾನವಾಗಿ ಗಾಡಿಯಿಂದ ಇಳಿದು,ನನಗೆ ಸ್ವಲ್ಪ ಕೆಲಸವಿದೆ ,ನಾಳೆ ಕಲಿಯುತ್ತೇನೆ ಎಂದು ಸರ ಸರನೆ ಒಳಗೆ ನಡೆದೆ .ನನ್ನ ತಮ್ಮ ಸಿಕ್ಕಿದ್ದೇ ಛಾನ್ಸ್ ಅಂತ 2-3ರೌಂಡ್ ಗಾಡಿ ಓಡಿಸಿ ಒಳಗೆ ತಂದಿಟ್ಟ.ಮರುದಿನ ಮತ್ತೆ ಅದೇ ರಾಗ,ಅದೇ ಹಾಡು ಅಂತಾರಲ್ಲಾ ಹಾಗೆ ಆಯಿತು ...........3ನೇ ದಿವಸ ,ಇವತ್ತು ಏನಾದರೂ ಆಗಲಿ ಗಾಡಿ ಓಡಿಸಲೇ ಬೇಕು ಎನ್ನುವ ತೀರ್ಮಾನಕ್ಕೆ ಬಂದೆ,ಸರಿ ಗಾಡಿ ರಸ್ತೆಗೆ ಇಳಸಿ ಆಯಿತು,ಸ್ಟಾರ್ಟ್ ಮಾಡಿಯೂ ಆಯಿತು,ಮುಂದೆ ಏನಾಯಿತು ಎಂದು ನೀವೇ ಊಹಿಸಿರಬಹುದಲ್ಲಾ .................ಹೌದು,ಗಾಡಿ ಏನೋ ಮುಂದೆ ಹೋಯಿತು,ಆದರೇ ,ಗಾಡಿ ನಿಲ್ಲಿಸಲು ಬ್ರೇಕ್ ಬದಲು ಯಾಕ್ಸ್ಲೆಟ್ರ್ ಕೊಟ್ಟೆ ...ಮುಂದೆ  ಮುಂದೆ ಏನು...ಎದುರಿಗಿದ್ದ ಕರೆಂಟ್ ಕಂಬ ನನ್ನ ಗಾಡಿಯನ್ನು ಹಿಡಿದು ನಿಲ್ಲಿಸಿತ್ತು... ಅಕ್ಕಪಕ್ಕದ ಮನೆಯವರೆಲ್ಲಾ ಓಡಿಬಂದರು,ಕೆಲವರು,ಪೆಟ್ಟಾಯಿತ..ಎಂದರು,ಇನ್ನು ಕೆಲವರು ಕರೆಂಟ್ ಕಂಬ ಮುರಿದು ಹೋಯ್ತಾ ನೋಡ್ರೋ ಅಂತ ಗೇಲಿ ಮಾಡಿದ್ರು..ನನಗೇ ಗಾಯದಿಂದ ಆಗಿದ್ದ ನೋವಿಗಿಂತ ಎಲ್ಲರ ಎದಿರು ಬಿದ್ದದ್ದು ಭಾರಿ ಅವಮಾನ ವಾಗಿತ್ತು...ಏನು ಆಗಿಲ್ಲ,ಏನು ಆಗಿಲ್ಲಾ ಅಂತ ಬೇಗ ಬೇಗ ಒಳಗೆ ನಡೆದೇ...ಹೀಗೆ ,ಸಣ್ಣ ಪುಟ್ಟ ಗಾಯಗಳೊಂದಿಗೆ ವಾಹನಾಭ್ಯ್ಯಾಸ ಮುಗಿಯಿತು.ಅದಕ್ಕೆ ಇವತ್ತಿಗೂ ನಾನು ಗಾಡಿ ಓಡಿಸುತ್ತೇನೆ ಎಂದರೆ,ನಿಮ್ಮ ಮನೆಯ ಹತ್ತಿರ ಕರೆ0ಟ್ ಕ0ಬ ಇದೆಯಾ!!!!!!!!!ಎಂದು ಅಪ್ಪ ಮೊದಲು ನಮ್ಮಮನೆಯವರ ಹತ್ತಿರ ಕೇಳಿಕೊಳ್ಳುತ್ತಾರೆ!!!!!!!!!.....

ಗುರುವಾರ, ಆಗಸ್ಟ್ 9, 2012

ನಮ್ಮ ದೈನ೦ದಿನ ಬದುಕಿನಿ೦ದ ಮರೆಯಾಗುತ್ತಿರುವ ಪದ ”ನಿಶ್ಯಬ್ಧ”.

ಇತ್ತೀಚಿಗೆ ನಾವೆಲ್ಲಾ ಆಧುನೀಕತೆಗೆ ಒಗ್ಗಿಕೊ೦ಡು ಒಂದು ಪದವನ್ನೇ ಮರೆತು ಹೋಗಿದ್ದೇವೆ .......ಅದು ಯಾವುದು ????? ಅದೇ ''ನಿಶ್ಯಬ್ಧ'' .ಇಂದು ನಾವು ಎಲ್ಲಿ ನೋಡಿದರೂ,ಗಲಾಟೆ ,ಜೋರುಜೋರು ಧ್ವನಿ ,ಮೈಕಾಸುರನ ಹಾವಳಿ ,ವಾಹನಗಳ ಆರ್ಭಟ ,ಕಾರ್ಖಾನೆಗಳ ಕಿರುಚುವಿಕೆ...............ಹೇಳುತ್ತಾ ಹೋದರೆ,ಧಾರಾವಾಹಿಗಳ ರೀತಿ ಮುಗಿಯದ ಕತೆ .ಹೋಗಲಿ ಬಿಡಿ,ಮನೆಯಲ್ಲಾದರೂ ಒಂದು ನಿಮಿಷ ನೆಮ್ಮದಿಯಿಂದ ಇರೋಣ ಎಂದುಕೊಂಡರೆ ,ಅಬ್ಬಬ್ಬಾ .....ಆ ಮಿಕ್ಸಿಯ ಗರ್ ಎನ್ನುವ ಸಂಗೀತ ,ವಾಶಿಂಗ್ ಮಶಿನ್ನಿನ ಹೂಂಕಾರ,ಟಿ.ವಿ.ನಾನೇನು ಕಡಿಮೆ ಅಂತ ತನ್ನದೇ ಆದ ವಿವಿಧ ರೀತಿಯ ಸ್ವರಗಳನ್ನು ,ವಿವಿಧ ರೀತಿಯ ರಾಗಗಳಿಂದ ಮನೆಯೇ ಕಂಪಿಸುವಂತೆ ಹಾಡುತ್ತಿರುತ್ತದೆ .ಅಷ್ಟೇ ಅಲ್ಲದೆ ,ಫ್ಯಾನ್ ಜೋರಾಗಿ ಗಲಾಟೆ ಮಾಡದೇ ಇದ್ದರೂ ,ನಿಶ್ಯಬ್ಧ ಹಾಳು ಮಾಡಲು ಬೇಕಾಗುವಷ್ಟು ಶಬ್ಧವನ್ನಂತೂ ಹೊರಡಿಸುತ್ತದೆ ........ಇದೆಲ್ಲ ಆಯ್ತು ,ಇನ್ನು ಇರೋದೇ ಮಹಾನ್  ಗಲಾಟೆಕಾರ ಹಾಗೂ ಎಲ್ಲೆಂದರಲ್ಲಿ  ಯಾವಾಗ ಅಂದ್ರೆ ಅವಾಗಾ,ವಿವಿಧ ರೀತಿಯ ರಿಂಗಾಯನ ದಿಂದ  ಜನರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಜಂಗಮ ಗಂಟೆಗಳು .........ಅಬ್ಬಬ್ಬಾ ಅದೇನ್ ಮ್ಯುಸಿಕ್ ,ಅದೇನ್ ಹಾಡೋ !!!!!!!!ಅದರ ಸುಮಧುರ ಸಂಗೀತ ಅನುಭವಿಸಿದವರಿಗೆ ಗೊತ್ತು .......ಎಲ್ಲ ಮುಗಿತು,ಅನ್ನೋ ಅಷ್ಟರಲ್ಲಿ ಕಾಲಿಂಗ್ ಬೆಲ್ .......ನಾನು ಅವಾಗ್ ಅವಾಗ ಅವಾಜ್ ಹಾಕ್ತಾ ಇರ್ತೀನಿ ಅನ್ನುತ್ತೆ ...ನೋಡಿದ್ರಾ ನಾವು ಪ್ರಶಾಂತತೆಯನ್ನು ಎಷ್ಟು ರೀತಿಯಲ್ಲಿ ಕಳೆದು ಕೊಳ್ಳುತ್ತಿದ್ದೇವೆ ಎಂದು .....ಶಬ್ಧ... ಶಬ್ಧ್ಸ......ಶಬ್ಧಮಯವೀ ಬದುಕು....ಮೊದಲು ಹೀಗಿರಲಿಲ್ಲ....ಮನೆಗಳಲ್ಲಿ ಒ೦ದು ರೀತಿಯ ಶಾ೦ತತೆಯ ವಾತಾವರಣ ಇರುತ್ತಿತ್ತು.ಆದರೆ ಇ೦ದಿನ ದಿನಗಳಲ್ಲಿ ಮೀನಿನ ಹೆಜ್ಜೆಯನ್ನಾದರೂ ಹುಡುಕಬಹುದು ,  ಇ೦ತಹ ಶಾ೦ತತೆಯನ್ನು ಕಾಣುವುದು ಕಷ್ಟವೇ ಸರಿ !!!!ನೂರಾರು ಅನಗತ್ಯ ಶಬ್ಧಗಳನ್ನು ಚಟಗಳಂತೆ ಹಚ್ಚಿಕೊಂಡ ನಮಗೆ ಎಂದೋ ಒಮ್ಮೆ ಇಂತಹ ಏಕಾಂತ ಸಿಕ್ಕಿದಾಗ ಅದು ಬಹುಬೇಗ ಬೋರ್ ಎನ್ನಿಸಿಬಿಡುತ್ತದೆ.ಇವತ್ತು ನಾವು ಶಾಂತವಾಗಿರುವ ''ಮಾನಸ ಸರೋವರ''ಕ್ಕೆ ಅನಗತ್ಯವಾದ ಸದ್ದು ಗದ್ದಲಗಳ ಕಲ್ಲೆಸೆದು ,ನಮ್ಮ ಬದುಕಿನ ಶಾಂತತೆಯನ್ನು ಕಳೆದು ಕೊಂಡಿದ್ದೆವೇನೋ ...ಎಂದು ಭಾಸವಾಗುತ್ತಿದೆ ......


ಮಂಗಳವಾರ, ಜುಲೈ 31, 2012

ಕು೦ದಾದ್ರಿ ಕೈಬೀಸಿ ಕರೆಯುತಿದೆ...........



ಮಂಜು ಮುಸುಕಿದ ಬೆಟ್ಟಗಳ ಸಾಲುಗಳ ಮಧ್ಯೆ ,ಕಡಿದಾದ ತಿರುವುಗಳಲ್ಲಿ,ನಾವು ಚಲಿಸುತ್ತಿದ್ದೆವು.ಇಲ್ಲಿ ವಾಹನ ಚಾಲಕರು ,ವಾಹನ ಚಲಾಯಿಸುವಾಗ ಸ್ವಲ್ಪಗಮನ ತಪ್ಪಿದರೂ  ಸಾವಿರಾರು ಅಡಿಗಳ ಕೆಳಕ್ಕೆ ಬೀಳುವುದ0ತೂ  ಸತ್ಯ.............ಆಬ್ಬಬ್ಬಾ!!!!  ಆ ಹಾದಿಯಲ್ಲಿ ಪ್ರಯಾಣ ಮಾಡುವುದೇ ಒಂದು ಹೊಸ ಅನುಭವ.


ಇದು ಎಲ್ಲಪ್ಪಾ  .....ಎಂದುಕೊಳ್ಳುತ್ತಿದ್ದೀರಾ?ಅದೇ ಕುಂದಾದ್ರಿ ಬೆಟ್ಟ.ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ,ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ.ತೀರ್ಥಹಳ್ಳಿಯಿಂದ ಆಗು0ಬೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ . ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ.


ಬೆಟ್ಟ ತಲುಪಲು ಡಾಂಬರು ರಸ್ತೆ,ಹಾಗೂ ಕಾಲುದಾರಿಯೂ ಇದೆ.ಕುಂದಾದ್ರಿ ಬೆಟ್ಟ ಜೈನರ ಪವಿತ್ರ ಯಾತ್ರಾಸ್ಥಳ.ಬೆಟ್ಟದ ಮೇಲೆ ಪಾರ್ಶ್ವನಾಥ ಚೈತ್ಯಾಲಯವಿದೆ.ಚಾರಣಿಗರಿಗೆ ಚಾರಣ ಮಾಡಲು ಹೇಳಿ ಮಾಡಿಸಿದಂತಿದೆ ಈ ಕುಂದಾದ್ರಿ ಬೆಟ್ಟ.

ಬೆಟ್ಟದ ಮೇಲಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ.ಎಲ್ಲಿ ನೋಡಿದರಲ್ಲಿ ದಟ್ಟ ಕಾಡು ,ತೋಟಗಳು,ಹೊಲಗದ್ದೆಗಳು ಆ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲಾ......




ಈ ಬೆಟ್ಟದ ತುಟ್ಟತುದಿಯಲ್ಲಿ,ಒಂದು ಸುಂದರವಾದ ಪುಷ್ಕರಿಣಿಯೂ ನಮ್ಮ ಗಮನವನ್ನು ತನ್ನಕಡೆ ಸೆಳೆಯುತ್ತದೆ.ಇಲ್ಲಿ ಯಾವಾಗಲೂ ನೀರು ಇರುತ್ತದೆ ,ಎಂದು ಹೇಳುತ್ತಾರೆ.[ಆದರೇ ,ಪ್ರವಾಸಿಗರು ಪ್ರಕೃತಿಯು ನೀಡಿದ ಸ್ವಚ್ಛ ನೀರಿನ ಈ ಪುಷ್ಕರಿಣಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು,ಪ್ಲಾಸ್ಟಿಕ್ ಕವರ್ ,ಹಾಗೂ ಇನ್ನೂ ಅನೇಕ ಪ್ರಕೃತಿಯಲ್ಲಿ ಲೀನವಾಗದೇ ಇರುವಂತಹ ,ವಸ್ತುಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ.ಮನುಷ್ಯನ ಈ ಕೆಟ್ಟ ಸ್ವಭಾವಕ್ಕೆ ಪ್ರಕೃತಿ ತಿರುಗೇಟು ನೀಡುವ ಕಾಲ ದೂರದಲ್ಲಿಲ್ಲಾ........]


ಈ ಕುಂದಾದ್ರಿ ಬೆಟ್ಟದಲ್ಲಿ ಕುಂದಕುಂದ ಸ್ವಾಮಿಗಳು ತಪಸ್ಸು ಮಾಡಿದರೆಂಬ ಪ್ರತೀತಿ ಇದೆ.ಈ ಹಿನ್ನಲೆಯಲ್ಲಿ ''ಕುಂದಾದ್ರಿ''ಎಂಬ ಹೆಸರು ಬಂತು ಎನ್ನಲಾಗುತ್ತದೆ.

ಕನ್ನಡದಲ್ಲಿ ಕುಂದಾದ್ರಿ ಎಂಬ ಪದಕ್ಕೆ ''ಎತ್ತರವಾದ ಗೋಡೆ''ಎಂಬ ಅರ್ಥವೂ ಇದೆ .ಇದು ಕುಂದದ ರೀತಿ ಇರುವುದರಿಂದ ಇದಕ್ಕೆ ''ಕುಂದಾದ್ರಿ''ಎಂದು ಜನಬಳಕೆಯಲ್ಲಿ ಹೆಸರು ಬಂದಿರಬಹುದೆಂದು ಹೇಳಲಾಗುತ್ತದೆ.


ಕುಂದಾದ್ರಿಯ ತುದಿಯಲ್ಲಿ ಒಂದು ದೇವಾಲಯ ಮತ್ತು ನೀರಿನ ಅನುಕೂಲವಿದ್ದರೂ ಪ್ರವಾಸಿಗರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲ..ಚಾರಣಿಗರು ಕ್ಯಾಂಪ್  ಮಾಡಬಹುದು.ಪ್ರವಾಸಿಗರು ಸಮೀಪದ ತೀರ್ಥಹಳ್ಳಿ ಅಥವಾ ಆಗುಂಬೆಯಲ್ಲಿ ತಂಗಬಹುದು.


ಮತ್ತೊಂದು ವಿಷಯ ,ಕುಂದಾದ್ರಿ ಬೆಟ್ಟಕ್ಕೆ ಭೇಟಿ ನೀಡುವವರು ,ಊಟ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡು ಬಂದರೆ ಉತ್ತಮ.ಹಾಗಾದರೆ,ಈ ವೀಕೆಂಡ್ನಲ್ಲಿ ನಿಮ್ಮ ಪಯಣ ........ಕುಂದಾದ್ರಿ ಬೆಟ್ಟಕ್ಕೆ......





ಸೋಮವಾರ, ಜುಲೈ 23, 2012

ಅದ್ಭುತ ಎಲೆ ಕೀಟಗಳು.


''ಅಮ್ಮಾ.......ಅಮ್ಮಾ .....ಬಾಇಲ್ಲಿ ,ನಿನಗೇನೋ ತೋರ್ಸ್ತೀನ್ ಬೇಗ ಬಾ ಅಮ್ಮಾ.........''.ನಾನು ಅಡುಗೆ ಮನೆಯಲ್ಲಿದ್ದವಳು ಒಂದೇ ಉಸುರಿಗೆ ಓಡಿ ಬಂದು,''ಏನೋ ಅದು ನಿಂದು ಗಲಾಟೆ ,ಏನಿದೇ ....ಬೇಗ ತೋರಿಸು,ನನಗೆ ತುಂಬಾ ಕೆಲಸ ಇದೆ.''ಎಂದೆ .''ಅಮ್ಮಾ ಇಲ್ನೋಡು ಎಲೆಗೆ ಜೀವ ಬಂದು ಓಡಾಡ್ತಾ ಇದೆ!!!!!!!!!!!!!!!!!!''.ಹೌದು ಅವನು ನನಗೆ ತೋರಿಸಿದ್ದು ,ಎಲೆಯನ್ನೇ ಹೋಲುವ ಎಲೆಕೀಟವನ್ನು.ನಂತರ ಅವನಿಗೆ ಅದು ಎಲೆಅಲ್ಲಾ ,ಅದು ಒಂದು ಜಾತಿಯ ಕೀಟಎಂದು ಹೇಳಿದೆ.                                                                                                                                                                                      

ಕೆಲವು ಕೀಟಗಳು ಕಡ್ಡಿಗಳಂತೆ ಕಾಣಿಸುತ್ತವೆ.ಕೆಲವು ಕೀಟಗಳು ಗಿಡದ ಕಾಂಡಗಳು ಮತ್ತು ಮುಳ್ಳುಗಳನ್ನು ಅನುಕರಿಸುತ್ತವೆ.ಆದರೆ ಎಲೆಗಳನ್ನು ನಕಲು ಹೊಡೆಯುವುದರಲ್ಲಿ ಎಲೆಕೀಟಗಳನ್ನು ಮೀರಿಸಿದ ಜೀವಿಯೇ ಇಲ್ಲ ಎನ್ನಬಹುದು.



ಇವು ಎಲೆಗಳ ಆಕೃತಿ  ಮತ್ತು ಬಣ್ಣವನ್ನಷ್ಟೇ ಅಲ್ಲದೇ ಎಲೆಗಳ ನಡುವೆ ಇರುವ ನರಗಳನ್ನು ,ನಡುವೆ ಹುಳುಗಳು ಕಚ್ಚ್ಹಿದ ಗಾಯದ ಗುರುತುಗಳನ್ನೂ ಕೂಡ ಅಕ್ಷರಶಃ ನಕಲು ಹೊಡೆಯುತ್ತದೆ.

ಇವು ಹಸಿರು ಎಲೆಗಳಾಗಿ ಗಿಡಕ್ಕೆ ಜೋತು ಬೀಳುತ್ತವೆ,ಒಣ ಎಲೆಗಳಂತೆ ಗಾಳಿಯಲ್ಲಿ ತೇಲುತ್ತವೆ, ಮುಳ್ಳಿನ ಎಲೆಗಳಂತೆ ಗಿಡಗಳ ಮೇಲೆ ಕುಳಿತುಕೊಳ್ಳುತ್ತವೆ.ಇವು ನೆಲದ ಮೇಲೆ ನಡೆದಾಡುವಾಗಲೂ ಗಾಳಿಗೆ ತೂಗುವ ಎಲೆಗಳಂತೆ ಅತ್ತಿಂದಿತ್ತ ತೂಗುತ್ತ ನಡೆಯುತ್ತದೆ.

ಯಾವ ಪ್ರಾಣಿ ಪಕ್ಷಿಗಳ ಕಣ್ಣಿಗೂ ಗೋಚರವಾಗದಷ್ಟು ನೈಜವಾಗಿರುತ್ತವೆ ಅವುಗಳ ಅಣಕು ಕಲೆ!!!!!!!!!!!!!!!!!!!!.


ಗುರುವಾರ, ಜುಲೈ 19, 2012

ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು.

ಕುಂಟಾಬಿಲ್ಲೆ 


ಏ ಕಮಲಾ,ಬಾರೆ ಕುಂಟಾಬಿಲ್ಲೆ ಆಡನಾ.......ರೂಪಾ ಚೌಕಾಕಾರದ ಮನೆ ಹಾಕೇ ,ಅಷ್ಟರಲ್ಲಿ ನೀಲ,ದೇವಿಕ,ಲಲಿತ ಎಲ್ಲರನ್ನೂ ಕರ್ಕೊಂಡ್ ಬರ್ತೀನಿ .


ಸೆಟ್ ಆಟ 

ರವಿ,ಹೋಗೋ ಆಕಡೆ ..ಇದು ಹೆಣ್ಮಕ್ಳು ಆಡೋ ಆಟ ..........ನೀನು ಬುಗುರಿ ಆಡ್ಕೋ ಹೋಗೋ....ಬೇಗ ಬೇಗ ಒಂದೇ ಬಣ್ಣದ ಬಳೆ ಚೂರುಗಳನ್ನ ಜೋಡಿಸೋಣ ಬನ್ರೆ........


ಬುಗುರಿ ಆಟ 

ಏ ಹೋಗ್ರೆ ನಿಮ್ ಜೊತೆ ಯಾರ್ ಆಡಲಿಕ್ಕೆ ಬರ್ತಾರೆ,ನೋಡು ನನ್ನ ಬುಗುರಿ ಹೇಗ್ ತಿರಗ್ತಾ ಇದೆ.ನಿಮ್ಗ್ ಬರತ್ತಾ................ಬುಗುರಿ ತಿರಸಲಿಕ್ಕೆ.

ಗೋಲಿ ಆಟ.

 ಏ ರವಿಯಣ್ಣ ಬಾರೋ........... ಗೋಲಿ ಆಡೋಣಾ ...........ಪ್ಲೀಸ್ .........

ಎತ್ಗಲ್ ಆಟ.

 ಒಬ್ಳೇ ಎತ್ಗಲ್ ಆಡ್ತಾ ಇದೀನಿ .............ಯಾರಾದ್ರು ಜೊತೆಗಿದ್ದಿದ್ರೆ ಎಷ್ಟ್ ಚೆನ್ನಾಗ್ ಇರ್ತಿತ್ತು.ಕಮಲ,ನೀಲಾ ಎಲ್ಲಾ ಎಲ್ಹೊದ್ರು????????????

ಕಣ್ಣಾಮುಚ್ಚಾಲೆ 

ಕಣ್ಣಾಮುಚ್ಚೆ ಕಾಡೆಗೂಡೆ .....ಉದ್ದಿನ ಮೂಟೆ ಉರುಳೇ ಹೋಯ್ತು ...........................................ಕೂಕಾ ......ಕಣ್ ಬಿಟ್ಟೆ......... 


ಮರಕೋತಿ ಆಟ.

 ಏ ಬನ್ರೋ .......ಮರಕೋತಿ ಆಟ ಆಡನ ಅಂತ ಮರ ಹತ್ತಿಸಿ ಹ್ಹೊದೋರು ಎಲ್ಹೊದ್ರೋ ............ನನಗೆ ಭಯ ಆಗ್ತಿದೆ .......ಪ್ಲೀಸ್ ಕೆಳಗಿಳ್ ಸ್ರೋ ............. 

ಚನ್ನೆಮಣೆ 

 ಬಾರೆ ಶ್ರೀಮತಿ ,ಮಕ್ಕಳು ಹೇಗೂ ಹೊರಗಡೆ ಆಡ್ತಾ ಇದಾರೆ.ನಂದೂ ಕೆಲಸ ಮುಗಿತು ,ಇಬ್ಬರೂ ಸ್ವಲ್ಪ ಹೊತ್ತು ಚನ್ನೆಮಣೆ ಆಡಣಾ  ..........ಹೌದೆ  ವತ್ಸಲಕ್ಕ ......ನಂದೂ ಕೆಲಸ ಎಲ್ಲಾ ಮುಗಿತು ...........ಸ್ವಲ್ಪ ಹೊತ್ತು ಆಡಣ ............ಹಾಗಾದ್ರೆ ಶುರುಮಾಡು ಮತ್ತೆ......

                             ಈಗಿನ ಗಣಕ ಯಂತ್ರ ,ದೂರದರ್ಶನದ ಅಬ್ಬರ,ಮಕ್ಕಳ ಮಿತಿಮೀರಿದ ಹೋಂ ವರ್ಕ್ ಗಳ ನಡುವೆ ಈ ಕ್ರೀಡೆಗಳೆಲ್ಲಾ ಮರೆಯಾಗುತ್ತಿರುವುದು ತುಂಬಾ ಬೇಸರದ ಸಂಗತಿಯೇ ಸರಿ.ಹೀಗೆ ಹಳ್ಳಿಯಲ್ಲಿಯೇ ದೊರೆಯುವ ಯಾವುದೇ ರೀತಿಯ ವೆಚ್ಛ ಇಲ್ಲದ,ಬುದ್ದಿಗೆ ಕೆಲಸ ಕೊಡುವ,ದೇಹಕ್ಕೆ ವ್ಯಾಯಾಮ ಉಂಟಾಗುವ,ಮನಸ್ಸಿಗೆ ಆನಂದ ಕೊಡುವ,ಭೇದ ಭಾವ ವಿಲ್ಲದೇ ಎಲ್ಲಾ ಮಕ್ಕಳೂ ಹೊಂದಿಕೊಂಡು ಒಟ್ಟಿಗೇ ಆಡುತ್ತಿದ್ದ ಆಕಾಲವೆಲ್ಲಿ ..................ಮನೆಯಲ್ಲಿಯೇ ಟಿ .ವಿ ,ಗಣಕಯಂತ್ರಗಳ ಮುಂದೆ ಕುಳಿತು ,ಗಂಟೆಗಟ್ಟಲೇ ಸಮಯವನ್ನು ಕಳೆಯುವ ಇಂದಿನ ಮಕ್ಕಳ ಮುಂದಿನ ಭವಿಷ್ಯವನ್ನು ನೀವೇ ಒಮ್ಮೆ ಯೋಚಿಸಿ ನೋಡಿ...........................